ನಮ್ಮ ಸಮಾಜದಲ್ಲಿ ಮೇಲು, ಕೀಳು, ಅಸ್ಪೃಶ್ಯತೆ, ದಬ್ಬಾಳಿಕೆ, ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈಗದು ಎಷ್ಟರಮಟ್ಟಿಗೆ ಜೀವಂತವಾಗಿದೆ ಅಂತ ಗೊತ್ತಿಲ್ಲ.
ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿ ಅಮಾಯಕರ ಮೇಲೆ ಬಲಿಷ್ಠರು ನಡೆಸುವ ದಬ್ಬಾಳಿಕೆ, ಅವರು ಅನುಭವಿಸುವ ನೋವು. ಕಾನೂನು ವ್ಯವಸ್ಥೆಯ ನಡುವೆ ಪೊಲೀಸರ ಅಟ್ಟಹಾಸ, ಸಮಾನತೆಗಾಗಿ ಹೋರಾಟ ನಡೆಸುವ ಜನರ ಸುತ್ತ ನೈಜತೆಗೆ ಹತ್ತಿರ
ಎನ್ನುವಂಥ ಕಥೆಯನ್ನು ಹೇಳುವ ಚಿತ್ರವೇ "ಧೈರ್ಯಂ ಸರ್ವತ್ರ ಸಾಧನಂ".
ಬಾಲ್ಯದಿಂದಲೂ ಜೊತೆಯಲ್ಲೇ ಬೆಳೆದ ನಾಗ ದೊರೆ ಹಾಗೂ ಮತ್ಸ್ಯ ಸೇನ. ಒಮ್ಮೆ ಕಾಡಿನಲ್ಲಿ ಬೇಟೆಯಾಡಲು ಇವರಿಬ್ಬರೂ ಜೊತೆಯಾಗಿ ಸಾಗುತ್ತಾರೆ, ಅದರಲ್ಲಿ ನಾಗದೊರೆಗೆ ಬಂದೂಕು ಎಂದರೆ, ಪಂಚಪ್ರಾಣ, ಗುರಿಯನ್ನು ಎಂದೂ ತಪ್ಪಿದವನಲ್ಲ, ಹಾಗೆಯೇ ಮೇಲು-ಕೀಳು ಎನ್ನುವ ಬೇಧ ಭಾವಕ್ಕೆ ಗಮನ ಕೊಡದ ಇವರಿಬ್ಬರ ನಡುವೆ ಹುಳಿ ಹಿಂಡುವ ಪ್ರಯತ್ನ ಮಾಡುತ್ತಾರೆ.
ಆ ವ್ಯಕ್ತಿಯ ಮಾತಿನಂತೆ ಊರ ಮುಖಂಡ ಮತ್ಸ್ಯ ಸೇನ ಕೂಲಿ ಕೆಲಸ ಮಾಡುವರು ಬಂದೂಕ ಹಿಡಿದು ನಮ್ಮೊಟ್ಟಿಗೆ ಸಾಗಿದರೆ ಬೆಳೆಯುತ್ತಾರೆ ಎಂದು ನಾಗ ದೊರೆಯನ್ನು ದೂರ ಇಡುತ್ತಾನೆ. ತನ್ನ ಬಂದೂಕವನ್ನು ಕಸಿಯುತ್ತಾನೆ. ಇದು ನಾಗದೊರೆಯ ಮನಸ್ಸಿಗೆ ಗಾಸಿಯಾಗುತ್ತದೆ. ಇದೇ ಊರಿನ ಹಿರಿಯ ವಕೀಲ ಮೋಹನ್ ಭೀಮ್ ಜಿ ಸಹಕಾರದೊಂದಿಗೆ ಹಿಂದುಳಿದ ನಾಗದೊರೆ ಹಾಗೂ ಅವರ ಜನಾಂಗದವರನ್ನು ಒಗ್ಗೂಡಿಸುತ್ತಾರೆ. ನಾವೆಲ್ಲ. ವಿದ್ಯೆ, ಸಮಾನತೆಯ ಹಾದಿಯಲ್ಲಿ ಸಾಗಬೇಕೆಂದು ಹೇಳುತ್ತಾರೆ. ನಾಗದೊರೆಯ ಪುತ್ರ ಡ್ರಾವಿಡ(ವಿವಾನ್) ಕೂಡ ಓದಲು ಮುಂದಾಗುತ್ತಾನೆ. ಹೆಂಡತಿಯ ಸಹಕಾರ ದೊಂದಿಗೆ ಕಷ್ಟಪಟ್ಟು ದುಡಿದು ಸ್ವಂತ ಬಂದೂಕನ್ನ ಲೈಸೆನ್ಸ್ ಮೂಲಕ ಪಡೆಯುತ್ತಾನೆ. ಅಚಾನಕ್ಕಾಗಿ ಒಂದು ದಿನ ಆ. ಬಂದೂಕಿನಿಂದಲೇ ತಾಯಿ ಸಾಯುವ ದೃಶ್ಯ ನೋಡುವ ಮಗ ಹೆದರುತ್ತಾನೆ. ತಂದೆಯ ಆಶ್ರಯದಲ್ಲಿ ಬೆಳೆಯುವ ಮಗ ವಿದ್ಯಾವಂತನಾಗಿದ್ದಾನೆ. ಆದರೆ ಬಂದೂಕ ಕಂಡರೆ ಮಾತ್ರ ಭಯ, ಆ ಊರಿಗೆ ಬರುವ ಹೊಸ ಪೊಲೀಸ್ ಇನ್ಸ್ಪೆಕ್ಟರ್ ಆರ್ಯ (ಯಶ್ ಶೆಟ್ಟಿ) ಸ್ಟೇಷನ್ ಗೆ ಬರುತ್ತಿದ್ದಂತೆ ಆಚಾರ, ಪದ್ಧತಿ, ಮಡಿವಂತಿಕೆ ಬಗ್ಗೆ ಹೇಳುತ್ತಲೇ ಹೆಣ್ಣು ಮಕ್ಕಳನ್ನು ಕಂಡರೆ ಜೊಲ್ಲು ಸುರಿಸುತ್ತಾನೆ. ಸಮಾಜದಲ್ಲಿ ಎಲ್ಲರೂ ಒಂದೇ ಸಮಾನತೆ , ಜಾತಿ ಪದ್ಧತಿ , ವಿದ್ಯಾಭ್ಯಾಸ ಎಷ್ಟು ಮುಖ್ಯ ಎಂಬುದರ ಅರಿವು ಮೂಡಿಸುವ ನಿಟ್ಟಿನಲ್ಲಿ ದ್ರಾವಿಡ ಸಾಗಿದರೆ. ಅವನ ಬೆಂಬಲಕ್ಕೆ ಜನರು ಹಾಗೂ ದ್ರಾವಿಡ ತಂದೆ ನಿಲ್ಲುತ್ತಾರೆ. ಇದು ಮುಖಂಡರಿಗೆ ಅನ್ಯ ಕೋಮಿನ ಜನರಿಗೆ ಸಹಿಸಲಾಗುವುದಿಲ್ಲ. ಮುಂದೆ ಪೊಲೀಸ್ ಇನ್ಸ್ಪೆಕ್ಟರ್ ಆರ್ಯನ ಜೊತೆ ಸೇರಿ ಕೀಳು ಜನರು ನಾವು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡಲು ಮುಂದಾಗುತ್ತಾರೆ. ಇದಕ್ಕೆ ಬೆಂಬಲವಾಗಿ ಅಂಬಿಕಾ ಭೀಮ್ ಜಿ (ಅನುಷಾ ರೈ) ಮೋಹನ್ ಭೀಮ್ ಜಿ ಮೊಮ್ಮಗಳು ಸಾತ್ ನೀಡುತ್ತಾಳೆ. ಹಾಗೆಯೇ ದ್ರಾವಿಡನನ್ನ ಪ್ರೀತಿಸುತ್ತಾಳೆ. ತನ್ನ ಸ್ಟೇಷನ್ ಮಹಿಳೆಯರು ಸೇರಿದಂತೆ ಬೇರೆ ಹೆಣ್ಣುಗಳನ್ನು ಬಲತ್ಕರಿಸುವ ಆರ್ಯನ ಆರ್ಭಟಕ್ಕೆ ಕಡಿವಾಣ ಇಲ್ಲದಂತಾಗುತ್ತದೆ. ಇದರ ನಡುವೆ ನಾಗದೊರೆಯ ಹತ್ಯೆಯಾಗುತ್ತದೆ. ದ್ರಾವಿಡ ಕಂಗಾಲಾಗುತ್ತಾನೆ. ತಾಯಿ ಆಸೆಯಂತೆ ಸರಕಾರಿ ಕೆಲಸ, ತಂದೆಯ ಆಸೆಯಂತೆ ಬಂದೂಕು ಹಿಡಿಯುವ ಕನಸುಆತನಿಂದ ದೂರ ಉಳಿಯುತ್ತದೆ. ಆದರೆ ಇವನಿಗೆ ಬೆನ್ನೆಲುಬಾಗಿ ನಿಲ್ಲಲುಹೊರಟ ಅಂಬಿಕಾ ಮೇಲೆ ಇನ್ಸ್ಪೆಕ್ಟರ್ ಹಾಗೂ ಮುಖಂಡರ ಕಣ್ಣು ಬೀಳುತ್ತದೆ.
ದ್ರಾವಿಡ ತನ್ನ ಸ್ವಾಭಿಮಾನ ಹಾಗೂ ತಂದೆಯ ಆಸೆ ಪೂರೈಸುವುದಕ್ಕೆ ಒಂದು ಸವಾಲ್ ಎದುರಿಸುತ್ತಾನೆ. ಅದು ಇಡೀ ದ್ರಾವಿಡ ಹಾಗೂ ಅವನ ಜನಾಂಗದ ದಿಕ್ಕನ್ನೇ ಬದಲಿಸುತ್ತದೆ.
ಚಿತ್ರದ ಕ್ಲೈಮಾಕ್ಸ್ನಲ್ಲಿ ಏನಾಗುತ್ತೆ ಎಂಬುದನ್ನು ತಿಳಿಯಲು ನೀವು ಥೇಟರಿನಲ್ಲಿ ಈ ಚಿತ್ರವನ್ನು ಒಮ್ಮೆಯಾದ್ರೂ ನೋಡಲೇಬೇಕು.
ನಿರ್ದೇಶಕ ಎ.ಆರ್. ಸಾಯಿರಾಮ್ ಅವರು ಮೊದಲ ಪ್ರಯತ್ನದಲ್ಲಿ ಬಹಳ ಸೂಕ್ಷ್ಮವಾದ ವಿಚಾರದ ಮೇಲೆ ಬೆಳಕು ಚೆಲ್ಲಿದ್ದಾರೆ. ಸಮಾನತೆಯ ಜೊತೆಗೆ ಮೇಲು-ಕೀಳು, ದುಷ್ಟರ ದಬ್ಬಾಳಿಕೆ. ಕಾನೂನು ಎಲ್ಲರಿಗೂ ಒಂದೇ ಎಂದು ಈ ಕಥೆಯ ಮೂಲಕ ಹೇಳೋ ಪ್ರಯತ್ನ ಮಾಡಿದ್ದಾರೆ.. ಆದರೂ ಸಮಾಜಕ್ಕೆ ಸಮಾನತೆಯ ಬಗ್ಗೆ ಹೇಳಿರುವ ರೀತಿ ಉತ್ತಮವಾಗಿದೆ. ಇಂತಹ ಚಿತ್ರವನ್ನು ಧೈರ್ಯಮಾಡಿ ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇಬೇಕು . ಈ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು, ಛಾಯಾಗ್ರಾಹಕರ ಕೈಚಳಕವೂ ಗಮನ ಸೆಳೆಯುತ್ತದೆ. ಅಷ್ಟೇ ರೋಚಕವಾಗಿ ಸಾಹಸ ದೃಶ್ಯಗಳು ಮೂಡಿಬಂದಿದೆ.
ಇನ್ನು ಈ ಚಿತ್ರದ ನಾಯಕ ವಿವಾನ್ ಕೂಡ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯಾಗಿ ಅನುಷಾ ರೈ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ವಿಶೇಷವಾಗಿ ಬಲ ರಾಜವಾಡಿ ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಕಾಣಿಸಿಕೊಂಡಿದ್ದಾರೆ. ದುಷ್ಟ ಪೊಲೀಸ್ ಅಧಿಕಾರಿಯ ಪಾತ್ರವನ್ನು ಯಶ್ ಶೆಟ್ಟಿ ಅದ್ಭುತವಾಗಿ ನಿಭಾಯಿಸಿದ್ದಾರೆ. ಉಳಿದಂತ ವರ್ಧನ್, ಚಕ್ರವರ್ತಿ ಚಂದ್ರಚೂಡ್, ಪ್ರದೀಪ್ ಪೂಜಾರಿ , ರಾಮ್ ಪವನ್, ಮೀನಾ, ಪದ್ಮಿನಿ ಶೆಟ್ಟಿ, ಅರ್ಜುನ್ ಪಾಳೆಗಾರ, ರಾಮ್ನಾಯಕ್, ಹೊಂಗಿರಣ ಚಂದ್ರು ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.